Pages

Subscribe:

Ads 468x60px

Sunday, May 31, 2009

ಮಹಾಭಾರತ ವಂಶಾವಳಿ

ಮಹಾಭಾರತದಲ್ಲಿ ಬರುವ ವಿವಿಧ ಪಾತ್ರಗಳು ಮತ್ತು ಅವುಗಳ ನಡುವಿನ ಸಂಬಂಧಗಳ ಕುರಿತು ಚಿಕ್ಕ ವಿವರಣೆ.


ಅತ್ರಿ ಮುನಿಯಿಂದ ಮಹಾಭಾರತದ ವಂಶಾವಳಿ ಆರಂಭವಾಗುವುದು. ಈ ಮುನಿಯ ವಂಶ ಬೀಜವಾಗಿ ಚಂದ್ರನ ಜನನವಾಗುತ್ತದೆ. ಈತನಿಂದಲೇ ಚಂದ್ರ ವಂಶದ ಆರಂಭವಾಯಿತು. ಚಂದ್ರನಿಗೆ ಬುಧನೆಂಬ ಮಗನು ಜನಿಸಿದನು. ಬುಧ ಮತ್ತು ಆತನ ಹೆಂಡತಿ ಭೂದೇವಿಯಿಂದ ಪುರೂರವನು ಜನಿಸಿದನು. ಪುರೂರವನ ಹೆಂಡತಿ ಊವ೯ಶಿ, ಇವರಿಬ್ಬರ ಸಂತತಿಯೇ ಆಯ:ಕುಮಾರಕ. ಮುಂದೆ ಈ ಆಯ:ಕುಮಾರಕನಿಗೆ ನಹುಷನೆಂಬ ಮಗನೂ, ನಹುಷನಿಗೆ ಯಯಾತಿಯೂ ಜನಿಸಿದರು.

ಕಾಲಾನಂತರದಲ್ಲಿ ಚಂದ್ರವಂಶವು ಇಬ್ಭಾಗವಾಗುತ್ತದೆ. ಯದುವಿನಿಂದ "ಯಾದವ ವಂಶ" ಹಾಗೂ ಯಯಾತಿಯಿಂದ "ಕೌರವ ವಂಶ" ಉದಯವಾಯಿತು. ಮುಂದೆ ಈ ವಂಶದಲ್ಲಿ ಜನಿಸಿದ ದುಷ್ಯಂತನಿಂದ ಭರತನ ಜನನವಾಯಿತು. ಈ ದೇಶಕ್ಕೆ ಭರತನಿಂದಲೇ ಭಾರತ ಎಂಬ ಹೆಸರು ನಾಮಕರಣವಾಯಿತು. ಮುಂದೆ ಭರತನಿಗೆ ಸುಹೋತ್ರ, ಸುಹೋತ್ರನಿಗೆ ಹಸ್ತಿಯು ಜನಿಸಿದರು. ಹಸ್ತಿಯಿಂದಲೇ "ಹಸ್ತಿನಾಪುರದ" ಉಗಮವಾಯಿತು. ಕಾಲಾನಂತರದಲ್ಲಿ, ಇದೇ ಸಂತತಿಯಲ್ಲಿ ಸಂವರಣನೂ, ಸಂವರಣನಿಂದ ಕುರುಮಹೀಪತಿಯೂ ಜನಿಸಿದರು. ಕುರುಮಹೀಪತಿಯಿಂದಾಗಿ ಕೌರವ ವಂಶದ ಆರಂಭವಾಯಿತು. ಹೀಗೇ ಮುಂದುವರಿಯಲು, ಈ ಪರಂಪರೆಯಲ್ಲಿ ಪ್ರತೀಪ ರಾಜನೂ ಆತನಿಂದ ಶಂತನುವೂ ಜನಿಸಿದರು.

ಶಂತನುವು ಬೆಳೆದು ರಾಜನಾದಂತೆ; ನದಿಬಯಲಿಗೆ ವಿಹಾರಕ್ಕೆಂದು ಹೋದಾಗ ಗಂಗೆಯನ್ನು ಕಂಡು ಮೋಹಗೊಳ್ಳುತ್ತಾನೆ. ಆಕೆಯನ್ನು ವಿವಾಹವಾಗ ಬಯಸಲು ಆಕೆಯು "ನಾನು ಯಾರೆಂದು ಕೇಳಕೂಡದು, ನಾನು ಮಾಡುವ ಕೆಲಸಗಳಿಗೆ ಅಡ್ಡಿಪಡಿಸಬಾರದು" ಎಂದು ಶರತ್ತನ್ನು ವಿಧಿಸುತ್ತಾಳೆ. ಶಂತನುವಿನ ಎದೆಯಲ್ಲಿ ಪ್ರೇಮಾಂಕುರಿಸಿದ್ದರಿಂದ, ಈ ಶರತ್ತುಗಳಿಗೆ ಒಪ್ಪಿ ಗಂಗೆಯನ್ನು ವರಿಸುತ್ತಾನೆ. ಇವರಿಬ್ಬರಿಗೆ ಎಂಟು ಜನ ಮಕ್ಕಳು, ಎಂಟನೆಯ ಮಗುವೇ ಭೀಷ್ಮ. ಈ ಎಂಟೂ ಜನ ಮಕ್ಕಳೂ ಹಿಂದೆ ಅಷ್ಟವಸುಗಳಾಗಿದ್ದವರು. ವಶಿಷ್ಟರ ಕಾಮಧೇನುವನ್ನು ಹಿಂಸಿಸಿದ್ದರಿಂದ ಶಾಪಗ್ರಸ್ತರಾಗಿ ಏಳು ಜನ ವಸುಗಳು ಗಂಗೆಯುದರದಲ್ಲಿ ಜನಿಸಿ ನದಿಗೆ ಎಸೆಯಲ್ಪಡುತ್ತಾರೆ. ಎಂಟನೆಯ ವಸು ಅಂದರೆ ಭೀಷ್ಮ ಹೆಂಡತಿಯ ಮಾತನ್ನು ಕೇಳಿ ಕಾಮಧೇನುವನ್ನು ಪೀಡಿಸಿದ್ದರಿಂದ ಶಾಪಗೊಂಡು, ಹೆಂಡತಿಯ ಸುಖವನ್ನು ಪಡೆಯದೇ ಮುಂದೆ ಶಿಖಂಡಿಯಿಂದ ಹತನಾಗುತ್ತಾನೆ. ಭೀಷ್ಮನ ಜನನವಾದಕೂಡಲೆ ಗಂಗೆಯು ಆ ಮಗುವನ್ನೂ ನೀರಿಗೆಸೆಯಲು ಉದ್ಯುಕ್ತಳಾದಾಗ ಶಂತನುವಿನಿಂದ ಪ್ರಶ್ನಿಸಲ್ಪಟ್ಟು, ಶರತ್ತು ಮುರಿದುಬಿದ್ದ ಕಾರಣ ಮಗುವನ್ನು ಗಂಡನ ಕೈಗಿತ್ತು ಮೂಲ ಗೃಹವನ್ನು ಸೇರುತ್ತಾಳೆ.

ಉಪರಿಚರ ವಸುಗಳು ಹಿಂದೊಮ್ಮೆ ನದಿಯ ಮಾಗ೯ವಾಗಿ ಚಲಿಸುವಾಗ, ರೇತಸ್ಖಲನವಾಗಿ ಅದನ್ನು ಮತ್ಸ್ಯವೊಂದು ನುಂಗಲು ಆ ಮತ್ಸ್ಯಗಂಧಿಯಲ್ಲಿ ಸತ್ಯವತಿಯ ಜನನವಾಗುತ್ತದೆ. ಇದೇ ಉಪರಿಚರ ವಸುಗಳ ರೇತಸ್ಖಲನದಿಂದ ಮುಂದೆ ವಿರಾಟ ರಾಜನ ಜನನವಾಗುತ್ತದೆ. ಪರಾಶರ ಮುನಿಯು ಸತ್ಯವತಿಯಲ್ಲಿ ಮೋಹಗೊಂಡು ಕೂಡಲು ವೇದವ್ಯಾಸರ ಜನಿಸುತ್ತಾರೆ. ಆದರೆ ಪರಾಶರ ಮುನಿಯು ಸತ್ಯವತಿಗೆ ಪುನ:ಕನ್ಯತ್ವವನ್ನು ಕರುಣಿಸಲು ಮುಂದೆ ಆಕೆ ಶಂತನುವನ್ನು ವಿವಾಹವಾಗುತ್ತಾಳೆ. ಚಿತ್ರಾಂಗಧ ಮತ್ತು ವಿಚಿತ್ರವೀಯ೯, ಶಂತನು ಮತ್ತು ಸತ್ಯವತಿಯ ಮಕ್ಕಳು. ಶಂತನುವಿನ ಮರಣದ ನಂತರ ಆಪತ್ಕಾಲದಲ್ಲಿ ಚಿತ್ರಾಂಗಧನೂ ಮಡಿಯಲು ವಿಚಿತ್ರವೀರ್ಯನು ಪಟ್ಟಾಭಿಷಿಕ್ತನಾಗುತ್ತಾನೆ. ಭೀಷ್ಮನು ಇವರನ್ನೆಲ್ಲಾ ಸಲಹುತ್ತಿರಲು, ಕಾಶಿರಾಜನ ಮಕ್ಕಳಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ತಂದು ವಿಚಿತ್ರವೀಯ೯ನಿಗೆ ವಿವಾಹ ಮಾಡಿಸುತ್ತಾನೆ. ಆದರೆ ಇನ್ನೊಬ್ಬ ಮಗಳಾದ ಅಂಬೆಯು ಭೀಷ್ಮನೇ ತನಗೆ ವರನಾಗಬೇಕೆಂದು ಹಟ ಹಿಡಿಯಲು ಭಿಷ್ಮನಿಂದ ತಿರಸ್ಕೃತಳಾಗಿ, ನೊಂದು ಮುಂದೆ ದ್ರುಪದನ ಉದರದಲ್ಲಿ ಶಿಖಂಡಿಯಾಗಿ ಜನಿಸಿ ಭೀಷ್ಮನ ಸಾವಿಗೆ ಕಾರ‍ಣಳಾಗುತ್ತಾಳೆ. ನಂತರದಲ್ಲಿ ವಿಚಿತ್ರವೀಯ೯ನೂ ಸುರಲೋಕವನ್ನು ಸೇರಲು, ಸಂತತಿ ಮುಂದುವರಿಯದೇ ಇರಲು, ವೇದವ್ಯಾಸರ ವರಪ್ರಸಾದದಿಂದಾಗಿ ಅಂಬಿಕೆಗೆ ದೃತರಾಷ್ಟ್ರನೂ(ಜಾತ್ಯಂಧ), ಅಂಬಾಲಿಕೆಗೆ ಪಾಂಡುವೂ ಮತ್ತು ಒಬ್ಬ ದಾಸಿಗೆ ವಿದುರನೂ ಜನಿಸಿದರು.

ಕುಂತಿಯು ಹಿಂದೆ ದೂವಾ೯ಸ ಮುನಿಯನ್ನು ಫಲ, ಪುಷ್ಪ, ಭೋಜನಾದಿಗಳಿಂದ ಸತ್ಕರಿಸಲು ಮುನಿಯು ಸಂತುಷ್ಟನಾಗಿ "ಇಷ್ಟ ದೇವನಿಂದ ಮಗನನ್ನು ಪಡೆ" ಎಂಬ ವರವನ್ನು ನೀಡುತ್ತಾನೆ. ಈ ಮಂತ್ರೋಕ್ತಿಯನ್ನು ಪರೀಕ್ಷಿಸಲೋಸುಗ ಕುಂತಿಯು ಸೂಯ೯ದೇವನನ್ನು ನೆನೆಯಲು, ಪ್ರತ್ಯಕ್ಷನಾಗಿ ತೇಜಪುಂಜನಾದ ಕಣ೯ (ರಾಧೇಯ) ನನ್ನು ದಯಪಾಲಿಸುತ್ತಾನೆ. ಆದರೆ ಭಯಭೀತಳಾದ ಕುಂತಿಯು ಆ ಮಗುವನ್ನು ಸಲಹಲೊಲ್ಲದೆ ನದಿಯಲ್ಲಿ ತೇಲಿಬಿಡುತ್ತಾಳೆ. ಆ ಮಗುವನ್ನು ಶೂದ್ರನೊಬ್ಬ ಸಲಹುತ್ತಾನೆ. ಮುಂದೆ ಕುಂತಿಯು ಪಾಂಡುವಿನ ಹೆಂಡತಿಯಾಗುತ್ತಾಳೆ. ದೃತರಾಷ್ಟ್ರನು ಹುಟ್ಟುಕುರುಡನಾದ್ದರಿಂದ ಪಾಂಡು ರಾಜ್ಯಭಾರವನ್ನು ನಡೆಸುತ್ತಾನೆ. ದೃತರ‍ಷ್ಟನು ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿಯನ್ನು, ಪಾಂಡುರಾಜ ಕುಂತಿ ಮತ್ತು ಮಾದ್ರಿಯರನ್ನು ವಿವಾಹವಾಗುತ್ತಾರೆ. ಪಾಂಡು ರಾಜನು ವನ್ಯಮೃಗಗಳ ಬೇಟೆಗೆಂದು ಹೋದಾಗ ಮುನಿದಂಪತಿಗಳು ಮೃಗರೂಪಧಾರಿಗಳಾಗಿ ಸುಖಿಸುತ್ತಿರಲು ರಾಜನು ನಿಜ ಮೃಗವೆಂದೇ ಭಾವಿಸಿ ಬಾಣ ಪ್ರಯೋಗಿಸುತ್ತಾನೆ. ಸಾಯುವಾಗ ಮುನಿಯು ನಿಜರೂಪವನ್ನು ತಾಳಿ "ನೀನೂ ಕೂಡ ನಿನ್ನ ಹೆಂಡತಿಯರೋಡನೆ ಸುಖಿಸುವಾಗ ಮರಣಹೊಂದು" ಎಂದು ಶಾಪಗೈಯ್ಯುತ್ತಾನೆ. ಪಾಂಡುವಿಗೆ ಸಂತತಿ ಭಾಗ್ಯವಿಲ್ಲದಿರಲು ಚಿಂತಿತಳಾದ ಕುಂತಿಯು ಹಿಂದೆ ದೂವಾ೯ಸ ಮುನಿಯು ನೀಡಿದ ವರವನ್ನು ನೆನೆಯುತ್ತಾಳೆ. ಕುಂತಿಯು ವರಮಂತ್ರವನ್ನು ಜಪಿಸಿ ಯಮನಿಂದ ಧಮ೯ರಾಯನನ್ನು, ವಾಯುವಿನಿಂದ ಭೀಮನನ್ನು ಮತ್ತು ಇಂದ್ರನಿಂದ ಅಜು೯ನನನ್ನು ಮಕ್ಕಳಾಗಿ ಪಡೆಯುತ್ತಾಳೆ. ಇತ್ತ ಮಾದ್ರಿಯು ಮಕ್ಕಳಿಲ್ಲದೇ ಚಿಂತಿಸುತ್ತಿರಲು ಕುಂತಿಯು ತಾನು ವರವಾಗಿ ಪಡೆದ ಮಂತ್ರವನ್ನು ಆಕೆಗೂ ಉಪದೇಶಿಸುತ್ತಾಳೆ. ಈ ಆ ದಿವ್ಯ ಮಂತ್ರವನ್ನ ಜಪಿಸಿ ಮಾದ್ರಿಯು ಆಶ್ವಿನಿ ದೇವತೆಗಳಿಂದ ನಕುಲ ಮತ್ತು ಸಹದೇವ ಎಂಬ ಇಬ್ಬರು ಮಕ್ಕಳನ್ನು ಪಡೆಯುತ್ತಾಳೆ. ಇತ್ತ ದೃತರಾಷ್ಟ್ರ ಮತ್ತು ಗಾಂಧಾರಿಗೆ ದುಯೋ೯ಧನ, ದುಶ್ಯಾಸನ, ವಿಕಣ೯, ಸುಭಾಹು ಮತ್ತು ಮಗಳಾಗಿ ದುಶ್ಯಳೆಯೊಡಗೂಡಿ ನೂರು ಮಕ್ಕಳು ಜನಿಸುತ್ತಾರೆ. ದೃತರಾಷ್ಟ್ರನಿಗೆ ವೇಶ್ಯಾಂಗನೆಯಲ್ಲೂ ಒಬ್ಬ ಮಗ ಜನಿಸುತ್ತಾನೆ, ಆತನೇ ಯುಯುತ್ಸು (ನೂರೊಂದನೆಯ ಮಗ). ಮುಂದೆ ಪಾಂಡು ಕಾನನದಲ್ಲಿ ಪತ್ನಿ ಮಾದ್ರಿಯನ್ನು ಕೂಡುವಾಗ ಮುನಿಯ ಶಾಪದಿಂದ ಮರಣಹೊಂದುತ್ತಾನೆ.

ಭೀಮನು ಒಮ್ಮೆ ಕೌರವರ ಚೇಷ್ಟೆಯಿಂದಾಗಿ ನೀರಲ್ಲಿ ಎಸೆಯಲ್ಪಡುತ್ತಾನೆ, ಆಗ ಸರ್ಪರಾಜನಾದ ವಾಸುಕಿಯ ಮಗಳು ಈತನ ಮೇಲೆ ಮೋಹಗೊಂಡು ಭೀಮನನ್ನು ವಿವಾಹವಾಗುತ್ತಾಳೆ. ಪಾಂಡವರು ಅಜ್ಞಾತವಾಸದಲ್ಲಿರುವಾಗ ಭೀಮನು ಒಮ್ಮೆ ಭಲೀಷ್ಟ ರಕ್ಕಸನಾದ ಹಿಡಿಂಬನನ್ನು ಸಂಶಿಸುತ್ತಾನೆ, ಆತನನ್ನು ಸಂಹಾರ ಮಾಡಿ, ಆತನ ಮಗಳಾದ ಹಿಡಿಂಬೆಯನ್ನು ವಿವಾಹವಾಗಿ ಭಲೀಷ್ಟನಾದ ಘಟೋತ್ಕಚನೆಂಬ ಮಗನ ಜನನಕ್ಕೆ ಕಾರಣನಾಗುತ್ತಾನೆ.

ಹೀಗೆ ಪಾಂಡವರು ಕೌರವರಿಂದ ಅನ್ಯಾಯಕ್ಕೊಳಗಾಗಿ ಕಾಡು ಮೇಡುಗಳಲ್ಲಿ ಅಜ್ಞಾತವಾಗಿ ಅಲೆಯುತ್ತಿರಲು ಒಮ್ಮೆ ಪಾಂಚಾಲ ದೇಶದ ರಾಜ ದ್ರುಪದನ ಮಗಳ ಸ್ವಯಂವರವನ್ನು ಹೊಕ್ಕುತ್ತಾರೆ. ದ್ರುಪದನಿಗೆ ಇಬ್ಬರು ಮಕ್ಕಳು, ದ್ರೌಪದಿ (ಮಗಳು) ಮತ್ತು ದೃಷ್ಟದ್ಯುಮ್ನ (ಮಗ). ಆ ಸ್ವಯಂವರದಲ್ಲಿ ಪಾಂಡವರು, ಮುಖ್ಯವಾಗಿ ಅರ್ಜುನನು ಮತ್ಸ್ಯ ಯಂತ್ರವನ್ನು ಬೇಧಿಸಿ ದ್ರೌಪದಿಯನ್ನು ಪಡೆಯುತ್ತಾನೆ. ನಂತರದಲ್ಲಿ ಕುಂತಿಯ ಮಾತಿನಿಂದಾಗಿ ದ್ರೌಪದಿಯನ್ನು ಪಾಂಡುಕುಮಾರರೈವರೂ ವಿವಾಹವಾಗುತ್ತಾರೆ. ದ್ರೌಪದಿಯು ಈ ಪಾಂಡವರಿಂದ ಶ್ರುತ ಸೋಮಕ, ಪ್ರತಿವಿಂದ್ಯ, ಶ್ರುತಕೀರ್ತಿ, ಶ್ರುತಸೇನ ಮತ್ತು ವಿಕ್ರಮ ಶತಾನಿಕ ಎಂಬ ಐವರು ಮಕ್ಕಳನ್ನು ಪಡೆಯುತ್ತಾಳೆ. ಮುಂದೆ ಈ ಐವರೂ ಅಶ್ವಥ್ಥಾಮನ ಪ್ರಮಾದದಿಂದಾಗಿ ಸಾವನ್ನಪ್ಪುತ್ತಾರೆ.



......ಮುಂದುವರಿಯುತ್ತದೆ

ಮೂಲ: ವ್ಯಾಸಭಾರತ (ಎನ್ಕೆ)